Pages

ಶ್ರೀ ಮಣ್ಣೆಮ್ಮ ದೇವಿಯವರ ಜಾತ್ರಾ ಮಹೋತ್ಸವ (ದಿನಾಂಕ:29.04.2013 ರಿಂದ 05.04.2013 ರವರೆಗೆ)


ಶ್ರೀ ಮಣ್ಣೆಮ್ಮ ದೇವಿಯವರ ಜಾತ್ರಾ ಮಹೋತ್ಸವ
(ದಿನಾಂಕ:29.04.2013 ರಿಂದ 05.04.2013 ರವರೆಗೆ)

 ಸರ್ವರಿಗೂ ಸುಸ್ವಾಗತ

ಗಂಗರಸರ ರಾಜಧಾನಿಯೆಂದೇ ಗುರುತಿಸಲ್ಪಡುವ ಮಣ್ಣೆ ಗ್ರಾಮದ ಗ್ರಾಮದೇವತೆ ಶ್ರೀ.ಮಣ್ಣೆಮ್ಮ ದೇವಿಯವರ ಜಾತ್ರಾಮಹೋತ್ಸವವು, ಮಣ್ಣೆ ಗ್ರಾಮದಲ್ಲಿ ದಿನಾಂಕ:29.04.2013 ರಿಂದ 05.04.2013 ರವರೆಗೆ ನಡೆಯಲಿದ್ದು, ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಈ ಕೆಳಗಿನಂತಿರುತ್ತವೆ.

ದಿನಾಂಕ: 29.04.2013, ಸೋಮವಾರ, ಶ್ರೀ ಸೋಮೇಶ್ವರ ಸ್ವಾಮಿಗೆ ಬೆಲ್ಲದಾರತಿ :-

ಸಂಜೆ ಸುಮಾರು 5.00 ಗಂಟೆಗೆ ಮಣ್ಣೆ ಗ್ರಾಮದ ಮಧ್ಯಭಾಗ ಅಂದರೆ ದೇವಾಲಯಗಳ ಆವರಣದಿಂದ ಶ್ರೀ ಸೋಮೇಶ್ವರ ದೇವಾಲಯದವರೆವಿಗೂ ಬೆಲ್ಲದಾರತಿ ನಡೆಯುತ್ತದೆ. ಸುಮಾರು ಸಂಜೆ 6.00 ಗಂಟೆಗೆ ಸೋಮೇಶ್ವರ ಸ್ವಾಮಿಗೆ ಬೆಲ್ಲದಾರತಿ ಒಪ್ಪಿಸಿ ಭಕ್ತರು ತಮ್ಮ ತಮ್ಮ ಮನೆಗೆ ತೆರಳುತ್ತಾರೆ. ರಾತ್ರಿ ಮಣ್ಣೆ ಗ್ರಾಮದ ಪಕ್ಕದ ಗ್ರಾಮವಾದ ಕನ್ನೂಹಳ್ಳಿಯ ಕಲಾವಿದರಿಂದ ನಲ್ಲತಂಗ ಅಥವಾ ಶನಿಪ್ರಭಾವ ಎಂಬ ಸುಂದರ ಪೌರಾಣಿಕ ನಾಟಕವನ್ನು ಮಣ್ಣೆ ಗ್ರಾಮದಲ್ಲಿ ಅಭಿನಯಿಸಲಿದ್ದಾರೆ.

ದಿನಾಂಕ: 30.04.2013, ಮಂಗಳವಾರ, ಶ್ರೀ ಮಣ್ಣೆಮ್ಮದೇವಿಯವರಿಗೆ ಉಪಾಹಾರ:-

    ಮಣ್ಣೆಮ್ಮ ದೇವಿಯು ಅಕ್ಕಪಕ್ಕದ ಊರಿನ ಪ್ರತಿ ಮನೆಗೆ ಹೋಗಿ ಮಡಿಲಕ್ಕಿಯನ್ನು ಕಟ್ಟಿಸಿಕೊಂಡು ರಾತ್ರಿ ಸುಮಾರು 8.30 ಗಂಟೆಗೆ ಮಣ್ಣೆ ಫೌಡಶಾಲೆಯ ಬಳಿ ಇರುವ ಪ್ರಥಮ ಪೂಜಾ ಮಂಟಪ (ಮಹಾನವಮಿ ಮಂಟಪ) ಕ್ಕೆ ಬಂದು ನಂತರ ಹೂವಿನ ಪಲ್ಲಕ್ಕಿಯೊಂದಿಗೆ ಮಣ್ಣೆಮ್ಮ ದೇವಾಲಯದವರೆವಿಗೆ ಮೊಸರನ್ನದ ಉಪಹಾರದೊಂದಿಗೆ ಮೆರವಣಿಗೆ ನಡೆಯುತ್ತದೆ.

ದಿನಾಂಕ:01.04.2013, ಬುಧವಾರ, ರಾಶಿಪೂಜೆ :-

    ಈ ದಿನವೂ ಸಹ ಮಣ್ಣೆಮ್ಮ ದೇವಿಯು ಮಣ್ಣೆ ಗ್ರಾಮದ ಅಕ್ಕಪಕ್ಕದ ಗ್ರಾಮಗಳ ಮನೆಮನೆಗೆ ತೆರಳಿ ಮಡಲಕ್ಕಿಯನ್ನು ಕಟ್ಟಿಸಿಕೊಂಡು ರಾತ್ರಿ ಸುಮಾರು 8.30 ಗಂಟೆಗೆ ಮಣ್ಣೆಮ್ಮ ದೇವಾಲಯಕ್ಕೆ ತೆರಳುತ್ತಾರೆ. ನಂತರ ಶ್ರೀ ಮಣ್ಣೆಮ್ಮ ದೇವಿಯವರ ಪವಾಡಗಳನ್ನು ಹಾಡಿ ಹೊಗಳುತ್ತಾರೆ ಮತ್ತು ತಾಯಿಯ ಸಹೋದರರಾದ ವೈಯಾಳಿ ಪೋತರಾಜ ಮತ್ತು ಚನ್ನಾಂಗಲದ ವೀರಭದ್ರರಿಗೆ ಮಾಂಸದ ಅಡುಗೆಯ ರಾಶಿಯನ್ನು ಎಡೆಯಿಟ್ಟು ರಾಶಿಪೂಜೆ ನೆರವೇರಿಸುತ್ತಾರೆ. ಈ ದಿನ ರಾತ್ರಿ 8.30 ಗಂಟೆಗೆ ಮಣ್ಣೆಮ್ಮದೇವಿಯ ರಥೋತ್ಸವ ಬೀದಿಯಲ್ಲಿ ಮಣ್ಣೆಯ ಕಲಾವಿದರಿಂದ ಶ್ರೀಕೃಷ್ಣ ಸಂಧಾನ ಅಥವಾ ಕುರುಕ್ಷೇತ್ರ ಎಂಬ ಸುಂದರ ಪೌರಾಣಿಕ ನಾಟಕವನ್ನು ಅಭಿನಯಿಸಲಿದ್ದಾರೆ

ದಿನಾಂಕ: 02.04.2013, ಗುರವಾರ, ಶ್ರೀ ಮಣ್ಣೆಮ್ಮದೇವಿಯವರಿಗೆ ತಂಬಿಟ್ಟಿನಾರತಿ ಮತ್ತು ಅಗ್ನಿ ಕೊಂಡ ಪೂಜೆ:-

ಈ ದಿನ ವಿಶೇಷವಾಗಿ ಮಣ್ಣೆ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಚಾಲನೆ ದೊರೆಯುತ್ತದೆ. ಬೆಳಗ್ಗೆ ಸುಮಾರು 8.00 ಗಂಟೆಗೆ ಮಣ್ಣೆಮ್ಮ ದೇವಿಯು ವಿವಿಧ ಪುಷ್ಪಗಳಿಂದ ಅಲಂಕೃತವಾಗಿ ಹೆಜ್ಜೆ ಹೆಜ್ಜೆಗೆ ತೆಂಗಿನಕಾಯಿಯ ಈಡುಗಾಯಿಯನ್ನು ಹಾಕಿಸಿಕೊಳ್ಳುತ್ತಾ, ಕುಣಿದು ಕುಪ್ಪಳಿಸಿ ಮಣ್ಣೆ ಗ್ರಾಮಕ್ಕೆ ಪ್ರವೇಶಿಸುವ ದೃಶ್ಯ ನೋಡುಗರ ಕಣ್ತುಂಬಿಕೊಳ್ಳುತ್ತದೆ. ಈ ದಿನ ಮಣ್ಣೆ ಗ್ರಾಮದ ಮಧ್ಯಭಾಗದಲ್ಲಿರುವ ದೇವಾಲಯಗಳ ಆವರಣದಲ್ಲಿ ಮಣ್ಣೆ ಗ್ರಾಮದ ಹಾಗೂ ಅಕ್ಕಪಕ್ಕದ ಸುಮಾರು ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಊರು ಪ್ರವೇಶಿಸುತ್ತಿದ್ದಂತೆಯೇ ತೆಂಗಿನ ಕಾಯಿಯ ಈಡುಗಾಯಿಯ ಸುರಿಮಳೆಯೇ ಹರಿಯುತ್ತದೆ. ದೇವರಾಟ, ಸೋಮನ ಕುಣಿತ ಇತ್ಯಾದಿ ಆಚಾರಗಳು ಮುಗಿದ ನಂತರ ಮಣ್ಣೆಮ್ಮ ದೇವಿಯವರಿಗೆ ಲಿಂಗಧಾರಣೆ ನಂತರ ಪ್ರತಿ ಮನೆಮನೆಗೂ ತೆರಳಿ ಮಡಿಲಕ್ಕಿಯನ್ನು ತುಂಬಿಸಿಕೊಂಡು ಪಲ್ಲಕ್ಕಿಯ ಮೇಲೆ ಬಂದು ಕುಳಿತುಕೊಂಡು ಮಣ್ಣೆಮ್ಮದೇವಿಯವರ ದೇವಾಲಯದವರೆಗೂ ಮೆರಣಿಗೆ ತೆರಳಿ ನಂತರ ಕೊಂಡಪೂಜೆ ನೆರವೇರಿಸಲಾಗುತ್ತದೆ.



ದಿನಾಂಕ: 03.04.2013, ಶುಕ್ರವಾರ, ಬಾಡೂಟ ಮತ್ತು ಕುಕ್ಕಲಮ್ಮದೇವಿಗೆ ತಂಬಿಟ್ಟಿನಾರತಿ:-

ಈ ದಿನ ಮಾಂಸಾಹಾರಿಗಳ ಪ್ರತಿ ಮನೆಯಲ್ಲೂ ವಿಶೇಷವಾದ ಮಾಂಸದೂಟದ ಭಕ್ಷ್ಯ ಭೋಜನಗಳು ನಡೆಯುತ್ತದೆ ಹಾಗೂ ಸಂಜೆ ಸುಮಾರು 5.30 ಗಂಟೆಗೆ ಊರಾಚೆಯ ಕುಕ್ಕಲಮ್ಮದೇವರಿಗೆ ತಂಬಿಟ್ಟಿನಾರತಿ ಕಾರ್ಯಕ್ರಮ ಇರುತ್ತದೆ. ಈ ದಿನ ರಾತ್ರಿ 8.30 ಗಂಟೆಗೆ ಮಣ್ಣೆಮ್ಮದೇವಿಯ ರಥೋತ್ಸವ ಬೀದಿಯಲ್ಲಿ ಮಣ್ಣೆಯ ಮತ್ತೊಂದು ನುರಿತ ಕಲಾ ತಂಡದವರಿಂದ ಶ್ರೀಕೃಷ್ಣ ಸಂಧಾನ ಅಥವಾ ಕುರುಕ್ಷೇತ್ರ ಎಂಬ ಸುಂದರ ಪೌರಾಣಿಕ ನಾಟಕವನ್ನು ಅಭಿನಯಿಸಲಿದ್ದಾರೆ)

ದಿನಾಂಕ: 04.04.2013, ಶನಿವಾರ, ಶ್ರೀ ಮಣ್ಣೆಮ್ಮದೇವಿಯವರ ರಥೋತ್ಸವ:-

ಈ ದಿನ ಸಂಜೆ ಸುಮಾರು 4.30 ಗಂಟೆಗೆ ಮಣ್ಣೆಮ್ಮ ದೇವಿಯವರನ್ನು ರಥೋತ್ಸವ ಜರುಗುತ್ತದೆ ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ


ದಿನಾಂಕ: 05.04.2013, ಭಾನುವಾರ, ಕಡೆ ಪರಿಷೆ, ಶ್ರೀ ಆಂಜನೇಯ ಸ್ವಾಮಿಗೆ ಬೆಲ್ಲದಾರತಿ, ಸುಲಿಗೆ ಸೇವೆ:-

ಈ ದಿನ ಮಣ್ಣೆ ಗ್ರಾಮದಲ್ಲಿರುವ ಎಲ್ಲಾ ದೇವಾಲಯಗಳು ವಿಶೇಷವಾಗಿ ಅಲಂಕೃತಗೊಂಡಿದ್ದು, ನಾನಾ ರೀತಿಯ ಪೂಜೆ ಪುನಸ್ಕಾರಗಳು ಬೆಳಗ್ಗಿನಿಂದ ಸಂಜೆಯವರಿಗೆ ಜರುಗುತ್ತಿರುತ್ತದೆ. ಈ ದಿನ ಜಾತ್ರೋತ್ಸವದ ಕಡೆ ದಿನವಾಗಿದ್ದು ರಥೋತ್ಸವದ ಬೀದಿಯ ಸೊಬಗು ಇನ್ನೂ ಸ್ವಲ್ಪ ಉಳಿದಿರುತ್ತದೆ. ಸಂಜೆ ಸುಮಾರು 6.00 ಗಂಟೆಗೆ ಊರ ಮಧ್ಯಭಾಗದಿಂದ ಶ್ರೀ ಆಂಜನೇಯ ಸ್ವಾಮಿಗೆ ಬೆಲ್ಲದಾರತಿ ನಡೆಯುತ್ತದೆ. ನಂತರ ಸುಮಾರು ರಾತ್ರಿ 7.00 ಗಂಟೆಗೆ ಊರ ಹೊರಗಿನ ಎಲ್ಲಾ ದೇವಾಲಯಗಳಿಂದ ಮೆರವಣಿಗೆ ದೇವರುಗಳು ಮುತ್ತಿನ ಪಲ್ಲಕ್ಕಿಯೊಂದಿಗೆ ವಿವಿಧ ವಾದ್ಯ ತಾಳ ಮೇಳಗಳೊಂದಿಗೆ ಊರನ್ನು ಪ್ರವೇಶಿಸುತ್ತವೆ. ನಂತರ ಎಲ್ಲಾ ದೇವರುಗಳನ್ನು ದೇವಾಲಯದ ಜಗುಲಿಯ ಮೇಲೆ ಕೂರಿಸಿ ಜನಪದ ಆಚರಣೆಗಳಾದ ದೇವರಾಟ, ದೊಡ್ಡಾಟ, ಕಳ್ಳಾಟ, ಸುಲಿಗೆ ಸೇವೆ, ಸೋಮನ ಕುಣಿತ, ಇತ್ಯಾದಿ ಆಟಗಳು ನಡೆಯುತ್ತವೆ.


ಸರ್ವರಿಗೂ ಆದರದ ಸುಸ್ವಾಗತ

ವಂದನೆಗಳೊಂದಿಗೆ,

ವಿಶ್ವನಾಥ್.ಬಿ.ಮಣ್ಣೆ
ಅಧ್ಯಕ್ಷರು,
ಜೀವ ಕಲಾ ಕನ್ನಡ ಸೇವಾ ಸಂಘ, ಮಣ್ಣೆ,